ಚಂದ್ರ – 6. Moon – 24 Guru’s Of Lord Dattatreya.
ಶುಕ್ಲ ಪಕ್ಷ ಕೃಷ್ಣ ಪಕ್ಷಗಳಲ್ಲಿ ಚಂದ್ರನು ಸರದಿಯಂತೆ ವೃದ್ಧಿಸುತ್ತಾ ಕ್ಷೀಣಿಸುತ್ತಾ ಇರುತ್ತಾನೆ. ಆದರೆ ಚಂದ್ರನು ಸತ್ಯವಾಗಿಯೂ ನಿಜವಾಗಿಯೂ ಬೆಳಯುವುದಾಗಲಿ, ಕ್ಷೀಣಿಸುವುದಾಗಲಿ ಆಗುವುದಿಲ್ಲ. ಚಂದ್ರನ ಬಿಂಬವು ನೀರಿನಲ್ಲಿ ಕಾಣಿಸಿಕೊಳ್ಳುತ್ತದೆ. ನೀರು ಅಲುಗಾಡಿದರೆ ಚಂದ್ರನ ಬಿಂಬವೂ ಅಲುಗಾಡುತ್ತದೆ. ಸತ್ಯವಾಗಿಯೂ ಚಂದ್ರನು ಅಲುಗಾಡಿರುವುದಿಲ್ಲ. ಹಾಗೆಯೇ ಜ್ಞಾನಿಗಳು ಚಲಿಸುವಂತೆ ಕಾಣುತ್ತಿದ್ದರೂ ಅವರು ಸತ್ಯದಲ್ಲಿಯೇ ನಿಶ್ಚಲವಾಗಿರುತ್ತಾರೆ. ಅವರಿಗೆ ಜನನ ಮರಣದ ದುಃಖವು ಇರುವುದಿಲ್ಲ. ಯಮನ ಶಕ್ತಿಯು ದೇಹಕ್ಕೆ ಸೀಮಿತವೇ ಹೊರತು ಆತ್ಮವನ್ನು ಸ್ಪರ್ಶಿಸಲಾಗದು.
ಕಾಲಪುರುಷ ಎಂಬ ನದಿಯು ಅತಿ ವೇಗದಲ್ಲಿದೆ. ಅಲೆಗಳಂತೆ ಪಂಚ ಭೂತಗಳಿಂದಾದ ಈ ಜೀವನವನ್ನು ಕಾಲ ಪುರುಷನು ಯಾವ ಕ್ಷಣದಲ್ಲಿ ಬೇಕಾದರೂ ಭಂಗ ಪಡಿಸಬಹುದು. ಬಾಲ್ಯ ಯೌವ್ವನಗಳಿಂದಲೇ ಜನ್ಮವು ಕಳೆಯುತ್ತಿದೆ. ಕಾಲವು ಕಳೆದಂತೆ ಸ್ವರ್ಗ ಲೋಕವೂ ನಶಿಸಿ ಹೋಗುತ್ತದೆ. ಇಂದ್ರನೂ ನಶಿಸಿ ಹೋಗುತ್ತಾನೆ. ಕಾಲನ ವೇಗದಿಂದ ಇಂದ್ರಾದಿ ದೇವರುಗಳು ಹಗಲಿರುಳೂ ದುಃಖಕ್ಕೆ ಈಡಾಗುತ್ತಾರೆ. ಪ್ರಳಯದಲ್ಲಿ ಬ್ರಹ್ಮಾದಿಗಳು ನಶಿಸಿ ಹೋಗುತ್ತಾರೆ. ಕಾಲದ ಗತಿಯನ್ನು ಲೌಕಿಕರು ಗಮನಿಸುವುದಿಲ್ಲ. ಬಾಲ್ಯ ಯೌವ್ವನಗಳು ಯಮನ ಹಿಡಿತದಲ್ಲಿದೆ ಮತ್ತು ಅವನು ಯಾವ ಕ್ಷಣದಲ್ಲಿ ಬೇಕಾದರೂ ನಾಶ ಉಂಟು ಮಾಡುವನೆಂಬ ಅರಿವು ನಮಗಿರುವುದಿಲ್ಲ.